02/10/2016
1. ಸೂರ್ಯೋದಯದ ವರ್ಣನೆ ಆಚಾರ್ಯರಿದ್ದ ಪರಿಸರ ಎಂದಿಗೂ ರಮಣೀಯವಾಗಿರುತಿತ್ತು ಎನ್ನುವದನ್ನು ಸೂಚಿಸುವದಕ್ಕಾಗಿ ಪಂಡಿತಾಚಾರ್ಯರು ಇಲ್ಲಿ ತುಂಬ ಸುಂದರವಾಗಿ ಸೂರ್ಯೋದಯವನ್ನು ವರ್ಣಿಸುತ್ತಾರೆ. ಸೂರ್ಯನ ಕಿರಣಗಳನ್ನು ಗೆಳೆಯರಿಗೆ ಹೋಲಿಸಿ ಮಾಡಿರುವ ವರ್ಣನೆಯಂತೂ ಅನ್ಯಾದೃಶ. ಬೆಳಗಿನ ಹೊತ್ತಿನಲ್ಲಿ ಭಗವಂತನಿಗೆ ಮಾಡುವ ನಮಸ್ಕಾರಗಳ ಮಾಹಾತ್ಮ್ಯದ ಚಿಂತನೆಯೊಂದಿಗೆ ಆ ಭಾಗದ ವಿವರಣೆ ಇಲ್ಲಿದೆ. 2. ಶಾಸ್ತ್ರಶ್ರವಣದ ಮಹತ್ತ್ವ ಅರುಣೋದಯಕಾಲಕ್ಕೆ ಸ್ನಾನವನ್ನು ಮಾಡಿ, ಜಪ ಧ್ಯಾನಾದಿಗಳನ್ನು ಮುಗಿಸಿದ ಮಧ್ವಶಿಷ್ಯರು ಭಗವಂತನಿಗೆ ನಮಸ್ಕಾರಗಳನ್ನು ಸಮರ್ಪಿಸಿ ಆಚಾರ್ಯರಿಂದ ಪಾಠವನ್ನು ಕೇಳಲು ಸಿದ್ಧರಾದರು ಎಂಬ ಮಾತನ್ನು ತಿಳಿಸುವಾಗ ಪಂಡಿತಾಚಾರ್ಯರು ‘‘ಶ್ರವಣಪರಮಕೃತ್ಯಾಯ’’ ಎಂದು ಶಾಸ್ತ್ರವ್ಯಾಖ್ಯಾನವೇ ಆಚಾರ್ಯರ ದಿನಚರಿಯ ಎಲ್ಲ ಸತ್ಕರ್ಮಗಳಲ್ಲಿ ಅತ್ಯಂತ ಮುಖ್ಯವಾದ ಸತ್ಕರ್ಮ ಎನ್ನುವದನ್ನು ತಿಳಿಸುತ್ತಾರೆ. ಅನುವ್ಯಾಖ್ಯಾನ, ತೈತ್ತಿರೀಯಭಾಷ್ಯ, ಕೃಷ್ಣಾಮೃತಮಹಾರ್ಣವ ಮುಂತಾದ ಗ್ರಂಥಗಳಲ್ಲಿ ಆಚಾರ್ಯರು ತಿಳಿಸಿರುವ ಶಾಸ್ತ್ರಶ್ರವಣದ ಮಾಹಾತ್ಮ್ಯವನ್ನು ಇಲ್ಲಿ ಚಿಂತಿಸಲಾಗಿದೆ. 3. ಮಧ್ವಶಿಷ್ಯರ ಪುಸ್ತಕಗಳು ಒಬ್ಬ ವಿದ್ಯಾರ್ಥಿ ಅಧ್ಯಯನದಲ್ಲಿ ಎಷ್ಟು ಆಸಕ್ತ ಎನ್ನುವದನ್ನು ಆತನ ಪುಸ್ತಕಗಳನ್ನು ನೋಡಿಯೇ ಹೇಳಬಹುದು. ಮಧ್ವಶಿಷ್ಯರು ತಮ್ಮ ಗ್ರಂಥಗಳನ್ನು ಅದೆಷ್ಟು ಒಪ್ಪವಾಗಿ ಇಟ್ಟುಕೊಳ್ಳುತ್ತಿದ್ದರು, ಆ ತಾಡೆವಾಲೆಗಳ ಪುಸ್ತಕವನ್ನು ಕಟ್ಟುವ ದಾರ, ಮುಚ್ಚುವ ಬಟ್ಟೆ, ಈ ಎಲ್ಲವೂ ಅದೆಷ್ಟು ಶುಭ್ರವಾಗಿರುತಿದ್ದವು, ಅವುಗಳಲ್ಲಿನ ಭಗವಂತನ ಸನ್ನಿಧಾನ ಅದೆಷ್ಟು ಸ್ಪಷ್ಟವಾಗಿತ್ತು ಎನ್ನುವ ರೋಚಕ ವಿಷಯದ ವಿವರಣೆ ಇಲ್ಲಿದೆ. 4. ಲಿಪಿಕರಣದ ಕೌಶಲ ಕೇವಲ ತಾಡೆವಾಲೆಗಳಷ್ಟೇ ಅಲ್ಲ, ಆ ತಾಡೆವಾಲೆಗಳಲ್ಲಿದ್ದ ಅಕ್ಷರಗಳೂ ಸಹ ಅದೆಷ್ಟು ಸುಂದರವಾಗಿ ಬರೆಯಲ್ಪಟ್ಟಿದ್ದವು ಎನ್ನುವದರ ರೋಚಕ ವಿವರಣೆ ಇಲ್ಲಿದೆ. 5. ಮಧ್ವಶಿಷ್ಯರ ಕೌಶಲ ಶ್ರೀಮದಾಚಾರ್ಯರ ಶಿಷ್ಯರಿಗೆ ಶಾಸ್ತ್ರಗ್ರಂಥಗಳಲ್ಲಿ ಇದ್ದ ಪರಿಣತಿಯನ್ನು ತುಂಬ ಸುಂದರವಾಗಿ ಪಂಡಿತಾಚಾರ್ಯರು ಚಿತ್ರಿಸುತ್ತಾರೆ. ಅಷ್ಟು ಪರಿಣತಿ ಇಲ್ಲದ ಶಿಷ್ಯರು ಭಗವದಾರಾಧನೆಯನ್ನು ಮಾಡಿ ಆ ಕೌಶಲವನ್ನು ಗಳಿಸಿದ್ದನ್ನೂ ಸಹ ನಮಗೆ ತಿಳಿಸುತ್ತಾರೆ. ನಾವು ಈ ದಿವಸ ಮಾಡಬೇಕಾದ ಕರ್ತವ್ಯ, ಪ್ರಾರ್ಥನೆಗಳನ್ನು ತಿಳಿಸುವದರೊಂದಿಗೆ ಈ ಉಪನ್ಯಾಸ ಮುಕ್ತಾಯವಾಗುತ್ತದೆ.
Play Time: 59:49
Size: 10.46 MB